Connect with Us
The Journey
ಕಲಾ ಸಂಗಮ ಕುಡ್ಲ ಮಂಗಳೂರಿನ ಅತ್ಯಂತ ಗೌರವಾನ್ವಿತ ವೃತ್ತಿಪರ ತುಳು ರಂಗತಂಡಗಳಲ್ಲಿ ಒಂದಾಗಿದೆ. ಹಿರಿಯ ರಂಗಕರ್ಮಿ, ನಾಟಕಕಾರ ಹಾಗೂ ನಿರ್ದೇಶಕರಾದ ವಿಜಯ್ ಕುಮಾರ್ ಕೊಡಿಯಾಲ್ಬೈಲ್ ಅವರ ನೇತೃತ್ವದಲ್ಲಿ ಈ ತಂಡ ಮುನ್ನಡೆಯುತ್ತಿದ್ದು, ತುಳು ರಂಗಭೂಮಿಯನ್ನು ರೂಪಿಸಿ ಆಧುನೀಕರಣಗೊಳಿಸಿದ ಕೆಲವೇ ಪ್ರಮುಖ ದಿಗ್ಗಜರಲ್ಲಿ ಅವರೂ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ವಿಜಯ್ ಕುಮಾರ್ ಕೊಡಿಯಾಲ್ಬೈಲ್ ಅವರ ರಚನೆಯ, ತುಳು ರಂಗಭೂಮಿಯಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದ ಹಾಸ್ಯ ನಾಟಕ 'ಒರಿಯರ್ದೊರಿ ಅಸಲ್' ಮೂಲಕ ಈ ತಂಡವು ವ್ಯಾಪಕ ಮನ್ನಣೆ ಗಳಿಸಿತು. ಈ ನಾಟಕದ ಪಂಚ್ ಡೈಲಾಗ್ಗಳು ತುಳುನಾಡಿನ ಮನೆಮಾತಾದವು; ಮುಂದೆ ಇದೇ ನಾಟಕವು ಅತ್ಯಂತ ಯಶಸ್ವಿ ತುಳು ಚಲನಚಿತ್ರವಾಗಿ ಹೊರಹೊಮ್ಮಿ, ಕಲಾ ಸಂಗಮ ತಂಡವನ್ನು ತುಳುನಾಡಿನಾದ್ಯಂತ ಮನೆಮಾತಾಗಿಸಿತು. ಈ ಯಶಸ್ಸಿನ ಬೆನ್ನಲ್ಲೇ ತಂಡವು ಚುರುಕಾದ ಹಾಸ್ಯ, ಬಲವಾದ ಸಾಮಾಜಿಕ ಕಾಳಜಿ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಒಳಗೊಂಡ ಸಾಲು ಸಾಲು ಹಿಟ್ ನಾಟಕಗಳನ್ನು ಪ್ರಸ್ತುತಪಡಿಸಿ ಜನಮನ್ನಣೆಗಳಿಸಿತು. ಕೊಡಿಯಾಲ್ಬೈಲ್ ಅವರೇ ರಚಿಸಿ ನಿರ್ದೇಶಿಸಿದ ಇವರ ಮತ್ತೊಂದು ಮಹಾನ್ ಕೊಡುಗೆ 'ಶಿವದೂತೆ ಗುಳಿಗೆ'. ಭಾರತವಷ್ಟೇ ಅಲ್ಲದೆ ವಿದೇಶದಾದ್ಯಂತ ನೂರಾರು ಪ್ರದರ್ಶನಗಳನ್ನು ಕಾಣುವ ಮೂಲಕ ದಾಖಲೆ ನಿರ್ಮಿಸಿದ ಈ ನಾಟಕವು ತುಳು ರಂಗಭೂಮಿಯ ದಿಕ್ಕನ್ನೇ ಬದಲಿಸಿತು. ಕೇವಲ ಹಾಸ್ಯಕ್ಕಷ್ಟೇ ಸೀಮಿತವಾಗಿದ್ದ ನಾಟಕ ಲೋಕಕ್ಕೆ, ಆಕರ್ಷಕ ರಂಗಸಜ್ಜಿಕೆ, ಅದ್ಭುತ ಧ್ವನಿ ಸಂಯೋಜನೆ ಮತ್ತು ಹಿಡಿದಿಟ್ಟುಕೊಳ್ಳುವ ತನ್ಮಯತೆಯ ಅಭಿನಯದೊಂದಿಗೆ ಭಕ್ತಿ ಹಾಗೂ ದೈವಿಕ ಸಂಸ್ಕೃತಿಯನ್ನು ಪರಿಚಯಿಸಿ ಹೊಸದೊಂದು ಅನುಭವವನ್ನು ನೀಡಿತು. ಈ ಐತಿಹಾಸಿಕ ನಾಟಕಗಳ ಮೂಲಕ ವಿಜಯ್ ಕುಮಾರ್ ಕೊಡಿಯಾಲ್ಬೈಲ್ ಮತ್ತು ಅವರ ಕಲಾ ಸಂಗಮ ತಂಡವು ತುಳು ರಂಗಭೂಮಿಯ ಇತಿಹಾಸದಲ್ಲೇ ಕ್ರಿಯಾಶೀಲತೆಗೆ ಹೆಸರುವಾಸಿಯಾಗಿದೆ.
Upcoming Productions
Catch ಕಲಾ live on stage this season.





